ಜಿಲ್ಲೆಯ ವಾತಾವರಣಕ್ಕೆ ಪೂರಕವಾಗಿ ಮಲೆನಾಡು, ಬಯಲು ಪ್ರದೇಶಗಳಲ್ಲಿ ಬಳಸುವ ಕೃಷಿ ಯಂತ್ರಗಳು ನಮ್ಮ ಜಿಲ್ಲೆಗೆ ಹೊಂದದಿದ್ದರೂ, ಸ್ಥಳೀಯ ಪರಿಸ್ಥಿತಿಗೆ ಪೂರಕವಾಗಿ ಅಂದರೆ ಬೆಟ್ಟ ಗುಡ್ಡಗಳ ನಡುವೆ ಇರುವ ಸಣ್ಣ ಸಣ್ಣ ಭತ್ತದ ಗದ್ದೆ ಹಾಗೂ ತೋಟಗಳಿಗೆ ವಿಶೇಷ ಸಣ್ಣ ಯಂತ್ರಗಳು ಸೂಕ್ತವಾಗಿದ್ದು ಬೆಳ್ತಂಗಡಿಯ ನಡ ಗ್ರಾಮದ ಸುರ್ಯದ ತಮ್ಮ ಗದ್ದೆಯಲ್ಲಿ ನಡೆದಿರುವ ಆವಿಷ್ಕಾರ ಹಾಗೂ ಅನುಷ್ಠಾನ ಕುರಿತು ಮಾಹಿತಿ ನಿಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಗದ್ದೆಯ ಫಲವತ್ತತೆಯನ್ನು ರೈತರು ಕಾಪಾಡಬೇಕೆಂದರು. ನೇಜಿ ನೆಡಲು, ಕಳೆ ಕೀಳಲು, ಕಾಳು ಮೆಣಸು ಬೇರ್ಪಡಿಸಲು ಉಪಯೋಗಿಸುವ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ಸಾಲಿನ ನೇಜಿ ನೆಡುವ ಟಿಲ್ರ್ ಮಾದರಿ ಯಂತ್ರದ ಬಗ್ಗೆ, ಹಾಗೂ ಪೆಟ್ರೋಲ್ ನಿಂದ ಓಡುವ ಈ ಯಂತ್ರಗಳಲ್ಲಿ ಪೆಟ್ರೋಲ್ ಬದಲಿಗೆ ಸೌರಶಕ್ತಿ ಅಳವಡಿಸುವ ಬಗ್ಗೆ ಸೆಲ್ಕೊ ಯೋಜನೆ ರೂಪಿಸುತ್ತಿದ್ದು, ಇಂತಹ ಯಂತ್ರಗಳ ಸದುಪಯೋಗವನ್ನು ಅರಿತು ಪಡೆಯುವ ಬಗ್ಗೆ ಇತರ ಕೃಷಿಕರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಕೃಷಿಕರಾದ ಸೀತಾರಾಂ ಶೆಟ್ಟಿಯವರು, ದೊಡ್ಡ ಯಂತ್ರಗಳಿಂದಾಗುವ ಲಾಭದ ಅನುಭವವನ್ನು ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಆನಂದ ಅವರು ಕೃಷಿಯಲ್ಲಿ ಸುಧಾರಿತ ಆಧುನಿಕ ಯಂತ್ರಗಳ ಬಳಕೆಯಿಂದಾಗುವ ಲಾಭಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು, ಕೃಷಿ ಸಂಸ್ಕೃತಿಯಿಂದ ದೇಶ ಉಳಿಯಲು ಸಾಧ್ಯ; ಕೃಷಿಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕೆಂದು ಅಭಿಪ್ರಾಯಪಟ್ಟರು. ಮುಖ್ಯ ಯೋಜನಾಧಿಕಾರಿ ನಝೀರ್ ಸ್ವಾಗತಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ವಂದಿಸಿದರು.