
ಜಿಲ್ಲೆಯ ಎಲ್ಲ ತಾಯಿಯಂದಿರಿಗೆ ಸ್ತನ್ಯಪಾನ ಮಹತ್ವದ ಅರಿವನ್ನು ಮೂಡಿಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ ಆಗಸ್ಟ್ 1ರಿಂದ 7 ತಾರೀಖಿನವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಮ್ಮಟಗಳನ್ನು ಹಮ್ಮಿಕೊಂಡಿದೆ.
ಈ ಕಮ್ಮಟದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 1 ರಂದು ರೋಶನಿ ನಿಲಯದಲ್ಲಿ ಪೂರ್ವಾಹ್ನ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, 'ಸ್ತನ್ಯಪಾನ: ಜೀವಸಂಬಂಧ ತುರ್ತು ಪ್ರತಿಕ್ರಿಯೆ - ನೀವು ತಯಾರಾಗಿದ್ದೀರಾ?'ಎಂಬ ವಿಷಯದ ಬಗ್ಗೆ ಪರಿಣತರು ಉಪನ್ಯಾಸ ನೀಡಲಿರುವರು. ಕಮ್ಮಟವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ಅವರು ಉದ್ಘಾಟಿಸಲಿರುವರು.
ಆ.3ರಂದು ಕುತ್ತಾರಿನ ಅಂಗನವಾಡಿ ಕೇಂದ್ರದಲ್ಲಿ 11 ಗಂಟೆಗೆ, 4 ರಂದು ಪಾವೂರಿನ ಅಕ್ಷರ ನಗರದ ಅಂಗನವಾಡಿ ಕೇಂದ್ರದಲ್ಲಿ, 5ರಂದು ಪುತ್ತೂರಿನ ನಗರದಲ್ಲಿರುವ ರಾಮಕೃಷ್ಣ ಹೆಣ್ಣುಮಕ್ಕಳ ಶಾಲೆಯಲ್ಲಿ, 6ರಂದು ಉಳ್ಳಾಲದಲ್ಲಿ, 7ರಂದು ಬೆಳ್ತಂಗಡಿಯ ಶಿರ್ಲಾಲುವಿನ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಾಹ್ನ 11 ಗಂಟೆಗೆ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನ್ಮದಿನದಿಂದ 6 ತಿಂಗಳವರೆಗೆ ತಾಯಿ ಎದೆ ಹಾಲು ಮಾತ್ರ ಉಣಿಸಬೇಕು; ನೀರು ಸೇರಿದಂತೆ ಬೇರೆ ಯಾವ ಆಹಾರವನ್ನೂ ಉಣಿಸಬಾರದು. 6-13 ತಿಂಗಳವರೆಗೆ ಎದೆ ಹಾಲಿನ ಜೊತೆ ಮೆತ್ತನೆ ಆಹಾರ ನೀಡುವುದನ್ನು ಆರಂಭಿಸಬೇಕು. ದಿನಕ್ಕೆ 3 ಬಾರಿಯಂತೆ ಎಣ್ಣೆ/ತುಪ್ಪದಲ್ಲಿ ಬೇಯಿಸಿದ ಬೇಳೆ ಮತ್ತು ಅನ್ನ ಜಜ್ಜಿರುವ ಧಾನ್ಯಗಳ ಜೊತೆ ಹಾಲನ್ನು ಕೊಡಬೇಕು. ಬೇಯಿಸಿದ ಆಲೂಗೆಡ್ಡೆ, ಬಾಳೇಹಣ್ಣು, ಸಪೋಟದಂತಹ ಹಣ್ಣುಗಳನ್ನು ತಿನ್ನಿಸಬೇಕು. ತಿನ್ನಿಸುವ ಕೈಗಳು ಶುಭ್ರವಾಗಿರಬೇಕು; 1-2 ವರ್ಷಗಳಲ್ಲಿ ಎದೆ ಹಾಲಿನ ಜೊತೆ ಮನೆ ಆಹಾರವನ್ನು ಕೊಡಬಹುದು.