
ಅಕ್ರಮ ಗಣಿಗಾರಿಕೆಗೆ ತಡೆ:
ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಗಣಿ ಗಾರಿಕೆಗೂ ಅವಕಾಶ ನೀಡಲಾಗುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಅರಣ್ಯ ರಕ್ಷಣೆಗೆ ಪೂರಕವಾಗಿ ಅರಣ್ಯ ರಕ್ಷಕರ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. 800 ಅರಣ್ಯ ರಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರನ್ನು ಅರಣ್ಯ ಇಲಾಖೆಯ ಕೆಲಸದಲ್ಲಿ ನೇಮಿಸಿಕೊಳ್ಳುವ ಚಿಂತನೆ ಸರಕಾರದ ಮುಂದಿದೆ ಎಂದು ಸಚಿವ ವಿಜಯಶಂಕರ್ ತಿಳಿಸಿದರು.
`ಹಸಿರು ಹೊನ್ನು' ಯೋಜನೆ:
ರಾಜ್ಯದಲ್ಲಿ ಬಯೋ ಡೀಸೆಲ್ ಮೊದಲಾದ ಜೈವಿಕ ಇಂಧನ ಉತ್ಪತ್ತಿಗೆ ಪೂರಕವಾದ ಮರಗಳು, ಆಯುರ್ವೇದ ಗಿಡ ಮೂಲಿಕೆಗಳನ್ನು ಬೆಳೆಯುವ `ಹಸಿರು ಹೊನ್ನು' ಯೋಜನೆ ಆರಂಭಿಸಲಾಗಿದೆ. ದೇವವನ ಮಾದರಿಯ ವನಗಳನ್ನು ಬೆಳೆಸಲು ಸರಕಾರ ಪ್ರೋತ್ಸಾಹ ನೀಡುತ್ತಿದೆ. ದೇವವನ ಪ್ರದೇಶಗಳಲ್ಲಿ ನರ್ಸರಿಯನ್ನು ನಿರ್ಮಿಸಿ ಜನರಿಗೆ ಗಿಡಗಳನ್ನು ಬೆಳೆಸಲು ಪೂರಕ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವಿಜಯ ಶಂಕರ್ ತಿಳಿಸಿದರು.
ಕೈಗಾರಿಕೆಗೆ 400 ಎಕರೆ ಭೂಮಿ ಸ್ವಾಧೀನ:
ಚೇಳೂರು, ಬಾಳೆಪುಣಿ, ಇರಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಪ್ರದೇಶ ನಿರ್ಮಿಸಲು ಈಗಾಗಲೇ 400 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 176.13 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಾಕಿ ಉಳಿದಿದೆ. ನಂದಿಕೂರು ಪ್ರದೇಶದಲ್ಲಿ 110 ಎಕರೆ ಜಮೀನು ವಶಪಡಿಸಿ ಕೊಳ್ಳಲಾಗಿದೆ. ಈ ಪ್ರದೇಶದ ಜನರ ಬೇಡಿಕೆಯಂತೆ ಶೇ. 50ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು, ಅಧಿಕಾರಿಗಳ ನ್ನೊಳಗೊಂಡ ಸಮಿತಿ ರಚಿಸಲಾಗುವುದು. ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ಮನವಿ ಕೇಂದ್ರ ಸರಕಾರ ಕರಾವಳಿಯ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನಿರಾಕರಿಸುತ್ತಿದೆ. ಈ ನೀತಿಯನ್ನು ಮರು ಪರಿಶೀಲಿಸಬೇಕು. ಪರಿಸರ ಸ್ನೇಹಿ ಸಣ್ಣ ಕೈಗಾರಿಕೆಗಳಿಗೆ ಕರಾವಳಿ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಲು ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ರಾಜ್ಯ ಸರಕಾರದಿಂದ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯೋಗೀಶ್ ಭಟ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಹಿರಿಯ ಅರಣ್ಯಧಿಕಾರಿಗಳು ಅವರು ಉಪಸ್ಥಿತರಿದ್ದರು.